ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಮತ್ತು ವಾರ್ತಾ ಹಾಗು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ಲೋಕಸಭೆಯಲ್ಲಿ ಎಐ ಆಡಳಿತ ಮತ್ತು ಅಭಿವೃದ್ಧಿ ಕುರಿತ ಸಂಸತ್ತಿನ ಪ್ರಶ್ನೆಗೆ ಉತ್ತರಿಸಿ, ತಂತ್ರಜ್ಞಾನವನ್ನು ಪ್ರಜಾಸತ್ತಾತ್ಮಕಗೊಳಿಸುವ ಮೂಲಕ ಕೃತಕ ಬುದ್ಧಿಮತ್ತೆ (ಎಐ) ಗಾಗಿ ಇರುವ ಭಾರತ ಸರ್ಕಾರದ ದೃಷ್ಟಿಕೋನವನ್ನು ವಿವರಿಸಿದರು.
ಏಳು ಉತ್ತಮವಾಗಿ ವ್ಯಾಖ್ಯಾನಿಸಲಾದ ಆಧಾರ ಸ್ತಂಭಗಳ ಮೇಲೆ ರೂಪಿಸಲಾಗಿರುವ ಇಂಡಿಯಾ ಎಐ ಮಿಷನ್ ನ ಪರಿವರ್ತಕ ಪರಿಣಾಮವನ್ನು ಕೇಂದ್ರ ಸಚಿವರು ಒತ್ತಿಹೇಳಿದರು, ರಾಷ್ಟ್ರೀಯ ಅಭಿವೃದ್ಧಿಗೆ ಎಐ ಅನ್ನು ಬಳಸಿಕೊಳ್ಳುವಲ್ಲಿ ಎಲ್ಲರ ಒಳಗೊಳ್ಳುವಿಕೆ ಮತ್ತು ನಾವೀನ್ಯತೆಯನ್ನು ಇದು ಖಚಿತಪಡಿಸುತ್ತದೆ ಎಂದರು.
ಭವಿಷ್ಯದ ಕೌಶಲ್ಯಗಳಲ್ಲಿ ನೊಂದಾಯಿಸಿಕೊಂಡಿರುವ ಜನರ ಸಂಖ್ಯೆಯ ಬಗ್ಗೆ ಸಂಸತ್ತಿನ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ಇತ್ತೀಚಿನ ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ತರಬೇತಿ ನೀಡಲು ಉದ್ಯಮ ಪಾಲುದಾರರ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಫ್ಯೂಚರ್ ಸ್ಕಿಲ್ಸ್ ಪ್ಲಾಟ್ಫಾರ್ಮ್ನಲ್ಲಿ ಈಗಾಗಲೇ 8.6 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ತಂತ್ರಜ್ಞಾನವನ್ನು ಪ್ರಜಾಸತ್ತಾತ್ಮಕಗೊಳಿಸುವುದು (ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು)
ವಿಶೇಷವಾಗಿ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳನ್ನು ಸಬಲೀಕರಣಗೊಳಿಸುವ ಮೂಲಕ ತಾಂತ್ರಿಕ ಸೌಲಭ್ಯಗಳನ್ನು ವಿಕೇಂದ್ರೀಕರಿಸುವ ಸರ್ಕಾರದ ಗಮನವನ್ನು ಶ್ರೀ ವೈಷ್ಣವ್ ಪ್ರಮುಖವಾಗಿ ಪ್ರಸ್ತಾಪಿಸಿದರು. ಗೋರಖ್ಪುರ, ಲಕ್ನೋ, ಶಿಮ್ಲಾ, ಔರಂಗಾಬಾದ್, ಪಾಟ್ನಾ, ಬಕ್ಸಾರ್ ಮತ್ತು ಮುಜಾಫರ್ಪುರದಂತಹ ನಗರಗಳಲ್ಲಿ ಎಐ ಡೇಟಾ ಪ್ರಯೋಗಾಲಯಗಳನ್ನು (ಲ್ಯಾಬ್ ಗಳನ್ನು) ಸ್ಥಾಪಿಸಲಾಗುತ್ತಿದೆ ಎಂದವರುತಿಳಿಸಿದರು.
ತಾಂತ್ರಿಕ ಅಭಿವೃದ್ಧಿಯು ಕೆಲವೇ ಪ್ರದೇಶಗಳಲ್ಲಿ ಕೇಂದ್ರೀಕೃತವಾಗದೆ ದೇಶಾದ್ಯಂತ ಹರಡುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ನವೋದ್ಯಮಗಳು, ಎಐ ಪ್ರಯೋಗಾಲಯಗಳು, 5 ಜಿ ಪ್ರಯೋಗಾಲಯಗಳು ಮತ್ತು ಅರೆವಾಹಕ ತರಬೇತಿ ಸೌಲಭ್ಯಗಳು ಸುಲಭ ಲಭ್ಯವಾಗುವ ಪರಿಸರ ವ್ಯವಸ್ಥೆಯನ್ನು ಬೆಳೆಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಸಾಮಾಜಿಕ ಪರಿಣಾಮಕ್ಕಾಗಿ ಎಐ ಬಳಕೆ
ಕೃಷಿ, ಶಿಕ್ಷಣ, ಆರೋಗ್ಯ, ಲಾಜಿಸ್ಟಿಕ್ಸ್ ಮತ್ತು ಹಣಕಾಸು ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಎಐ ಸಾಮರ್ಥ್ಯವನ್ನು ಕೇಂದ್ರ ಸಚಿವರು ಒತ್ತಿ ಹೇಳಿದರು ಮತ್ತು ಜವಾಬ್ದಾರಿಯುತ ಎಐ ಅಭಿವೃದ್ಧಿಯಲ್ಲಿ ಜಾಗತಿಕ ನಾಯಕತ್ವಕ್ಕೆ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.
“ಜನರ ಜೀವನದ ಮೇಲೆ ನೇರವಾಗಿ ಪ್ರಭಾವ ಬೀರುವ ಕ್ಷೇತ್ರಗಳಲ್ಲಿ ಎಐನ ಅತ್ಯಂತ ಮಹತ್ವದ ಅಪ್ಲಿಕೇಶನ್ಗಳು ಇರುತ್ತವೆ. ಕೃಷಿ, ಶಿಕ್ಷಣ, ಆರೋಗ್ಯ, ಲಾಜಿಸ್ಟಿಕ್ಸ್ ಮತ್ತು ಹಣಕಾಸು ವಲಯವು ದೇಶದ ಅಗತ್ಯಗಳಿಗೆ ಅನುಗುಣವಾಗಿ ಎಐ ಪರಿಹಾರಗಳಿಂದ ಅಪಾರ ಪ್ರಯೋಜನ ಪಡೆಯಲಿದೆ ಎಂದು ಶ್ರೀ ವೈಷ್ಣವ್ ಹೇಳಿದರು.
Matribhumi Samachar Kannad

