ನಾಗರಿಕರಿಗೆ ಸೇವೆಗಳನ್ನು ಒದಗಿಸಲು ದೇಶಾದ್ಯಂತ ಸಾಮಾನ್ಯ ಸೇವಾ ಕೇಂದ್ರಗಳನ್ನು (ಸಿ ಎಸ್ ಸಿ) ಸ್ಥಾಪಿಸಲಾಗಿದ್ದು, ಈ ಕೇಂದ್ರಗಳನ್ನು ಗ್ರಾಮ ಮಟ್ಟದ ಉದ್ಯಮಿಗಳು (ವಿ ಎಲ್ ಇ) ನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಶ್ರೀ ಜಿತಿನ್ ಪ್ರಸಾದ ಹೇಳಿದ್ದಾರೆ.
ಸಿ ಎಸ್ ಸಿ ಗಳ ಜಾಲವು ಬೆಳೆಯುತ್ತಲೇ ಇದ್ದು, ಪ್ರಸ್ತುತ ಭಾರತದಾದ್ಯಂತ ಸುಮಾರು 5.69 ಲಕ್ಷ ಕೇಂದ್ರಗಳು (ಸೆಪ್ಟೆಂಬರ್ 30, 2025 ರವರೆಗೆ) ಕಾರ್ಯನಿರ್ವಹಿಸುತ್ತಿವೆ, ಅವುಗಳಲ್ಲಿ 4.43 ಲಕ್ಷ ಕೇಂದ್ರಗಳು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಸುಮಾರು 14.5 ಲಕ್ಷ ಜನರು ವಿವಿಧ ಸಿ ಎಸ್ ಸಿ ಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿ ಎಸ್ ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಗ್ರಾಮ ಮಟ್ಟದ ಉದ್ಯಮಿಗಳಿಗೆ (ವಿ ಎಲ್ ಇ) ಉತ್ತಮ ಸೇವಾ ವಿತರಣೆ ಮತ್ತು ಸಾರ್ವಜನಿಕ ಸಂವಹನಕ್ಕಾಗಿ ಅವರ ಕೌಶಲ್ಯಗಳನ್ನು ಹೆಚ್ಚಿಸಲು ಡಿಜಿಟಲ್ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯನ್ನು ಒದಗಿಸುತ್ತದೆ. ಇಲ್ಲಿಯವರೆಗೆ, ದೇಶಾದ್ಯಂತ 12,95,405 ವಿ ಎಲ್ ಇ ಗಳಿಗೆ ಸರ್ಕಾರದಿಂದ ನಾಗರಿಕರಿಗೆ (ಜಿ 2 ಸಿ), ವಿಮೆ, ಬ್ಯಾಂಕಿಂಗ್, ಕೃಷಿ ಮತ್ತು ಇತರ ನಾಗರಿಕ ಕೇಂದ್ರಿತ ಸೇವೆಗಳನ್ನು ತಲುಪಿಸಲು ಸಿ ಎಸ್ ಸಿ ಯ ಡಿಜಿಟಲ್ ಸೇವಾ ಪೋರ್ಟಲ್ (ಡಿ ಎಸ್ ಪಿ) ಬಳಸುವ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ವಿ ಎಲ್ ಇ ಗಳ ಕೌಶಲ್ಯ ಮತ್ತು ಗಳಿಕೆಯ ಸಾಮರ್ಥ್ಯವನ್ನು ಬಲಪಡಿಸಲು ಸಿ ಎಸ್ ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಹಲವಾರು ಉಪಕ್ರಮಗಳನ್ನು ತೆಗೆದುಕೊಂಡಿದೆ, ಅವುಗಳಲ್ಲಿ ಈ ಕೆಳಗಿನವು ಸೇರಿವೆ:
- ಡಿಜಿಟಲ್ ಸಾಕ್ಷರತೆ ಮತ್ತು ಸೇವಾ ವಿತರಣಾ ಕೌಶಲ್ಯಗಳನ್ನು ಹೆಚ್ಚಿಸಲು ವಿ ಎಲ್ ಇ ಗಳಿಗೆ ನಿಯಮಿತ ತರಬೇತಿ.
- ಸಿ ಎಸ್ ಸಿ ಗಳ ಮೂಲಕ ಹಣಕಾಸು ಸೇವೆಗಳು [ಡಿಜಿಪೇ (ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಆಧರಿಸಿ), ಬ್ಯಾಂಕಿಂಗ್, ವಿಮೆ] ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಂತಹ ನವೀನ ಸೇವೆಗಳ ಪ್ರಚಾರ.
- ಸಿ ಎಸ್ ಸಿ ಗ್ರಾಮೀಣ್ ಸ್ಟೋರ್ ಮೂಲಕ ಇ-ಕಾಮರ್ಸ್ ಸೇವೆಗಳ ವಿತರಣೆ, ಇದರಿಂದಾಗಿ ವಿ ಎಲ್ ಇ ಗಳಿಗೆ ಜೀವನೋಪಾಯದ ಅವಕಾಶಗಳು ಹೆಚ್ಚಾಗುತ್ತವೆ.
ಈ ಸಿ ಎಸ್ ಸಿ ಗಳ ಮೂಲಕ 800 ಕ್ಕೂ ಹೆಚ್ಚು ಸೇವೆಗಳನ್ನು ತಲುಪಿಸಲಾಗುತ್ತಿದೆ. ಸೇವೆಗಳ ಪಟ್ಟಿ https://csc.gov.in/ ನಲ್ಲಿ ಲಭ್ಯವಿದೆ.
ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ (ಪಿಎಂಜಿದಿಶಾ) ಯೋಜನೆಯಡಿ ದೇಶಾದ್ಯಂತ ಒಟ್ಟು 6.39 ಕೋಟಿ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ಯೋಜನೆಯನ್ನು ಸಿ ಎಸ್ ಸಿ ಇ-ಗವರ್ನೆನ್ಸ್ ಸರ್ವೀಸಸ್ ಇಂಡಿಯಾ ಲಿಮಿಟೆಡ್ ಜಾರಿಗೆ ತಂದಿದ್ದು, 31.03.2024 ರಂದು ಮುಕ್ತಾಯಗೊಂಡಿತು.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ತರಬೇತಿ ವಿವರಗಳನ್ನು ಕೆಳಗೆ ನೀಡಲಾಗಿದೆ:
| ಪರಿಶಿಷ್ಟ ಜಾತಿಗಳು | ಪರಿಶಿಷ್ಟ ಪಂಗಡಗಳು | ಇತರೆ ಹಿಂದುಳಿದ ವರ್ಗಗಳು | |||
| ದಾಖಲಾದವರು | ತರಬೇತಿ ಪಡೆದವರು | ದಾಖಲಾದವರು | ತರಬೇತಿ ಪಡೆದವರು | ದಾಖಲಾದವರು | ತರಬೇತಿ ಪಡೆದವರು |
| 1,34,45,690 | 1,17,53,166 | 65,47,384 | 56,23,165 | 2,92,96,752 | 2,55,84,393 |
ಈ ಯೋಜನೆಯಡಿಯಲ್ಲಿ, ಕರ್ನಾಟಕ ರಾಜ್ಯದಲ್ಲಿ, ಗ್ರಾಮೀಣ ಕುಟುಂಬಗಳ 29.64 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ದಾಖಲಾಗಿದ್ದರು ಮತ್ತು 24.41 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತರಬೇತಿ ನೀಡಲಾಯಿತು.
ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಒಟ್ಟು 53,792 ಅಭ್ಯರ್ಥಿಗಳು ದಾಖಲಾಗಿದ್ದು, ಒಟ್ಟು 38,462 ಅಭ್ಯರ್ಥಿಗಳಿಗೆ ಪಿಎಂಜಿದಿಶಾ ಯೋಜನೆಯಡಿಯಲ್ಲಿ ತರಬೇತಿ ನೀಡಲಾಗಿದೆ.
ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (NIELIT) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಸ್ವಾಯತ್ತ ಸಂಸ್ಥೆಯಾಗಿದೆ. ಇದು ಮಾಹಿತಿ, ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ತಂತ್ರಜ್ಞಾನಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಗೆ ಕಾರಣವಾಗಿದೆ.
ಪ್ರಸ್ತುತ, NIELIT ಕರ್ನಾಟಕದ ಚಿತ್ರದುರ್ಗದಲ್ಲಿ ಒಂದು ಕೇಂದ್ರ ಸೇರಿದಂತೆ 56 ಕೇಂದ್ರಗಳನ್ನು ನೇರವಾಗಿ ನಿರ್ವಹಿಸುತ್ತಿದೆ. ಇದು 700 ಕ್ಕೂ ಹೆಚ್ಚು ಮಾನ್ಯತೆ ಪಡೆದ ತರಬೇತಿ ಪಾಲುದಾರರ ರಾಷ್ಟ್ರವ್ಯಾಪಿ ಜಾಲವನ್ನು ಹೊಂದಿದೆ ಮತ್ತು 9,000 ಕ್ಕೂ ಹೆಚ್ಚು ಸೌಲಭ್ಯ ಕೇಂದ್ರಗಳನ್ನು ನಿರ್ವಹಿಸುತ್ತದೆ.
NIELIT ಕರ್ನಾಟಕ ರಾಜ್ಯದಾದ್ಯಂತ 51 ಸೌಲಭ್ಯ ಕೇಂದ್ರಗಳನ್ನು ಹೊಂದಿದ್ದು, ವಿವಿಧ ಹಂತಗಳಲ್ಲಿ ಡಿಜಿಟಲ್ ಸಾಕ್ಷರತಾ ಕೋರ್ಸ್ ಗಳನ್ನು ನೀಡುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ, NIELIT ಡಿಜಿಟಲ್ ಸಾಕ್ಷರತಾ ಸೌಲಭ್ಯ ಕೇಂದ್ರವನ್ನು ಹೊಂದಿದ್ದು, ಅದು ಡಿಜಿಟಲ್ ಸಾಕ್ಷರತಾ ಕೋರ್ಸ್ (ಡಿ ಎಲ್ ಸಿ) ಕುರಿತು ತರಬೇತಿ ನೀಡುತ್ತದೆ.
NIELIT, ಕಳೆದ 3 ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ತನ್ನ ಕೇಂದ್ರಗಳು ಮತ್ತು ತರಬೇತಿ ಪಾಲುದಾರರ ಮೂಲಕ ಸುಮಾರು 3000 ವಿದ್ಯಾರ್ಥಿಗಳಿಗೆ ವಿವಿಧ ಕೌಶಲ್ಯ ಆಧಾರಿತ ದೀರ್ಘಾವಧಿ, ಅಲ್ಪಾವಧಿ ಮತ್ತು ಜಾಗೃತಿ ಕೋರ್ಸ್ ಗಳಲ್ಲಿ ತರಬೇತಿ ನೀಡಿದೆ.
ಕರ್ನಾಟಕ ರಾಜ್ಯ ಸೇರಿದಂತೆ ಸಿ ಎಸ್ ಸಿ ಗಳ ರಾಜ್ಯವಾರು ವಿವರಗಳು https://csc.gov.in/ ವೆಬ್ಸೈಟ್ನಲ್ಲಿ ಲಭ್ಯವಿದೆ.
ಲೋಕಸಭೆಯಲ್ಲಿ ಸದಸ್ಯರಾದ ಡಾ. ಕೆ ಸುಧಾಕರ್ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸಚಿವರು ಈ ಮಾಹಿತಿ ಒದಗಿಸಿದ್ದಾರೆ.
Matribhumi Samachar Kannad

