Monday, January 12 2026 | 07:30:22 PM
Breaking News

ವಿಕಸಿತ ಭಾರತದಲ್ಲಿ ಯುವ ಉದ್ಯೋಗಿಗಳ ಪಾತ್ರ ದೊಡ್ಡದು: ಸುಶ್ರೀ ಶೋಭಾ ಕರಂದ್ಲಾಜೆ

Connect us on:

ಕೇಂದ್ರ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂ ಎಸ್ ಎಂ ಇ), ಕಾರ್ಮಿಕ ಹಾಗು ಉದ್ಯೋಗ ರಾಜ್ಯ ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಬೆಂಗಳೂರಿನಲ್ಲಿ ಆಯೋಜಿಸಿದ್ದ 16ನೇ ರೋಜ್ ಗಾರ್ ಮೇಳವನ್ನು ಉದ್ಘಾಟಿಸಿ,  ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಈ ವೇಳೆ ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಆಶುತೋಷ್ ಮಾಥುರ್ ಮತ್ತು ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಸಚಿವರಾದ ಸುಶ್ರೀ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ನವ ಹಾಗು ಯುವ ಉದ್ಯೋಗಿಗಳು ವಿಕಸಿತ ಭಾರತವನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ತಮ್ಮ ಮುಂದಿನ ಸೇವಾ ಅವಧಿಯಲ್ಲಿ ಸಮರ್ಪಣಾ ಭಾವನೆ, ಹೃದಯ ಪೂರ್ವಕವಾಗಿ ಮತ್ತು ಅಂತರಾಳದಿಂದ ಕಾರ್ಯನಿರ್ವಹಿಸಬೇಕು. ಇದರಿಂದ ದೇಶವು ಮತ್ತಷ್ಟು, ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ. ಸದೃಢ ಭಾರತ ನಿರ್ಮಿಸಲು ಅನುಕೂಲವಾಗಲಿ ಎಂದರು.

ರೋಜ್ ಗಾರ್ ಮೇಳಗಳಿಂದ ಉದ್ಯೋಗ ಪಡೆದುಕೊಂಡವರಿಗೆ ಕೆಲಸ ಮಾಡಲು ಪ್ರೇರಣೆ ದೊರೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಇದುವರೆಗೂ 16 ರೋಜ್ ಗಾರ್ ಮೇಳಗಳನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿನಿತ್ಯ 18 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡುತ್ತಾರೆ. ಇದೇ ರೀತಿ ಉದ್ಯೋಗಿಗಳು ಸಹಾ ಹೆಚ್ಚಿನ ಸಮಯ ಕಾರ್ಯನಿರ್ವಹಿಸಿ, ತಮ್ಮ ಇಲಾಖೆಗಳ ಪ್ರಗತಿಗೆ ಶ್ರಮಿಸಬೇಕು. ಇದರಿಂದ ಸದೃಡ ಹಾಗು ಬಲಿಷ್ಠ ಭಾರತ ನಿರ್ಮಾಣ ಸಾಧ್ಯವಾಗಲಿದೆ ಎಂದು ತಿಳಿಸಿದರು.

ಇಂದಿನ ರೋಜ್ ಗಾರ್ ಮೇಳದಲ್ಲಿ ಹಲವರು ದೇಶದ ಹೆಮ್ಮೆಯ ಸೇನೆಯಲ್ಲಿಯೂ ಕೆಲಸ ಮಾಡಲು ಅವಕಾಶಗಳನ್ನು ಪಡೆದುಕೊಂಡಿದ್ದಾರೆ‌. ಇದು ಅತ್ಯಂತ ಸಂತಸದ ಸಂಗತಿ. ನಮ್ಮ ಸೈನಿಕರು ಕೇವಲ ಸಂಬಳಕ್ಕೆ ಮತ್ತು ಕುಟುಂಬಕ್ಕೆ ಕೆಲಸ ಮಾಡುವುದಿಲ್ಲ. ಬದಲಾಗಿ ಅವರು ಭಾರತದ 140 ಕೋಟಿ ಜನರ ರಕ್ಷಣೆಗೆ ಬದ್ಧರಾಗಿ, ಅನುದಿನವೂ ಕೆಲಸ ಮಾಡುತ್ತಿದ್ದಾರೆ. ಸದಾಕಾಲವೂ ದೇಶದ ರಕ್ಷಣೆ, ಸೇವೆಗಾಗಿ ಸಮರ್ಪಿಸಿಕೊಂಡಿದ್ದಾರೆ ಎಂದರು.

2047ರ ವೇಳೆಗೆ ವಿಕಸಿತ ಭಾರತದ ಸಂಕಲ್ಪ, ‌ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಢ ಸಂಕಲ್ಪವಾಗಿದೆ. ಇದರಲ್ಲಿ‌ ಪ್ರತಿಯೊಬ್ಬ ಪ್ರಜೆಯ ಹಾಗೂ ಉದ್ಯೋಗಿಯ ಕಾರ್ಯ ಮಹತ್ವದ್ದಾಗಿದೆ. ಯುವ ಸಮೂಹ ಮತ್ತು ನವ ಉದ್ಯೋಗಿಗಳು ದೇಶದ ಪ್ರಗತಿಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಏಳು ಕೋಟಿಗೂ ಅಧಿಕ ಮಂದಿ ಇ.ಪಿ.ಎಫ್. ನಲ್ಲಿ‌ ನೋಂದಣಿ ಮಾಡಿಕೊಂಡಿದ್ದಾರೆ. ಇದರ ಸಂಖ್ಯೆ ಕಳೆದ ಕೆಲ ವರ್ಷಗಳಿಂದ ಗಣನೀಯ ಏರಿಕೆ ಕಂಡಿದೆ. ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಹಲವು ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೂಪಿಸಿದೆ. ಅಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೂ ಹಲವು ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರೈಲ್ವೆಯ 61, ಸಾರ್ವಜನಿಕ ವಲಯದ ಬ್ಯಾಂಕ್ ಗಳ 46, ಬಿ.ಎಸ್.ಎಫ್ ಮತ್ತು ಸಿ.ಐ.ಎಸ್.ಎಫ್‌ ನ 14, ಅಂಚೆ ಇಲಾಖೆಯ 12, ಆದಾಯ ತೆರಿಗೆ ಇಲಾಖೆಯಲ್ಲಿ 7  ಅಭ್ಯರ್ಥಿಗಳು ಸೇರಿದಂತೆ ಒಟ್ಟು 185 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.

About Matribhumi Samachar

Check Also

ಹುಬ್ಬಳ್ಳಿಯಲ್ಲಿ ಹೊಸ ಯುಐಡಿಎಐ ಆಧಾರ್ ಸೇವಾ ಕೇಂದ್ರದ ಉದ್ಘಾಟನೆ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು 29 ಡಿಸೆಂಬರ್ 2025ರಂದು ಹುಬ್ಬಳ್ಳಿಯ ಕೇಶವಪುರದಲ್ಲಿ ಹೊಸ ಯುಐಡಿಎಐ ಆಧಾರ್ ಸೇವಾ ಕೇಂದ್ರವನ್ನು ಉದ್ಘಾಟಿಸಿದೆ. …