ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ‘ಭಾರತ್ ಸ್ಟೀಲ್’ನ ಅಧಿಕೃತ ಲಾಂಛನ, ಕರಪತ್ರ ಮತ್ತು ವೆಬ್ ಸೈಟ್ ಅನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಉಕ್ಕು ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂದೀಪ್ ಪೌಂಡ್ರಿಕ್ ಮತ್ತು ಉಕ್ಕು ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ದ್ವಿತೀಯ ಉಕ್ಕು ವಲಯದ ಕಾರ್ಯಾಗಾರದ ಸಂದರ್ಭದಲ್ಲಿ ನೆರವೇರಿದ ಈ ಅನಾವರಣವು, ಇಡೀ ಉಕ್ಕಿನ ಮೌಲ್ಯ ಸರಪಳಿಯಲ್ಲಿ ಬೆಳವಣಿಗೆ, ನಾವೀನ್ಯತೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ. ‘ಭಾರತ್ ಸ್ಟೀಲ್’ ಎಂಬುದು ಉಕ್ಕು ಪರಿಸರ ವ್ಯವಸ್ಥೆಯ ಕುರಿತಾದ ಉಕ್ಕು ಸಚಿವಾಲಯದ ಪ್ರಮುಖ ಅಂತಾರಾಷ್ಟ್ರೀಯ ಸಮ್ಮೇಳನ ಮತ್ತು ಪ್ರದರ್ಶನವಾಗಿದೆ. ನವದೆಹಲಿಯ ಭಾರತ್ ಮಂಟಪದಲ್ಲಿ 2026ರ ಏಪ್ರಿಲ್ 16-17 ರಂದು ನಡೆಯಲಿರುವ ಈ ಕಾರ್ಯಕ್ರಮವು ಭಾರತದ ಸಾಮರ್ಥ್ಯಗಳನ್ನು ಪ್ರದರ್ಶಿಸಲು, ಹಸಿರು ಮತ್ತು ಸುಸ್ಥಿರ ಉಕ್ಕು ತಯಾರಿಕೆಯನ್ನು ಉತ್ತೇಜಿಸಲು ಮತ್ತು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅವಕಾಶಗಳನ್ನು ಅನ್ವೇಷಿಸಲು ಜಾಗತಿಕ ಉದ್ಯಮದ ನಾಯಕರು, ನೀತಿ ನಿರೂಪಕರು, ತಂತ್ರಜ್ಞಾನ ಪೂರೈಕೆದಾರರು ಮತ್ತು ಹೂಡಿಕೆದಾರರನ್ನು ಒಟ್ಟುಗೂಡಿಸುತ್ತದೆ.

ಈ ಕಾರ್ಯಕ್ರಮದಲ್ಲಿ ವಿಷಯಾಧಾರಿತ ಅಧಿವೇಶನಗಳು, ವಲಯ ದುಂಡುಮೇಜಿನ ಸಭೆಗಳು, ರಾಜ್ಯ ಮತ್ತು ದೇಶದ ಮಟ್ಟದ ದುಂಡುಮೇಜಿನ ಸಭೆಗಳು, ಸಿ.ಇ.ಒಗಳ ಸಮ್ಮೇಳನ, ತಂತ್ರಜ್ಞಾನ ಪ್ರದರ್ಶನಗಳು, ಖರೀದಿದಾರ-ಮಾರಾಟಗಾರರ ಸಭೆಗಳು ಮತ್ತು ಪ್ರಾಥಮಿಕ ಮತ್ತು ದ್ವಿತೀಯ ಉಕ್ಕು ವಲಯಗಳ ವ್ಯಾಪಕ ಭಾಗವಹಿಸುವಿಕೆ ಇರುತ್ತದೆ. ಭಾರತ ಮತ್ತು ಅದರಾಚೆಗಿನ ಅತಿದೊಡ್ಡ ಉಕ್ಕು ಪ್ರದರ್ಶನವಾಗಬೇಕೆಂಬ ದೃಷ್ಟಿಕೋನದೊಂದಿಗೆ, ‘ಭಾರತ್ ಸ್ಟೀಲ್’, ಭಾರತವನ್ನು ಜಾಗತಿಕ ಉಕ್ಕು ಉದ್ಯಮದಲ್ಲಿ ನಾವೀನ್ಯತೆ, ಸಹಯೋಗ ಮತ್ತು ಹೂಡಿಕೆಯ ಕೇಂದ್ರವಾಗಿ ಇರಿಸುವ ಗುರಿಯನ್ನು ಹೊಂದಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ ಮತ್ತು ಇತರ ವಿವರಗಳು https://bharat.steel.gov.in ನಲ್ಲಿ ಲಭ್ಯವಿದೆ.
Matribhumi Samachar Kannad

