ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋ, ಚೆನ್ನೈಯ ಪ್ರೊ. ಟಿ. ಎನ್. ಅನಂತಕೃಷ್ಣನ್ ಫೌಂಡೇಶನ್, ನವದೆಹಲಿಯ ಭಾರತೀಯ ಕೀಟಶಾಸ್ತ್ರ ಸಂಘ, ಬೆಂಗಳೂರಿನ ಜೈವಿಕ ನಿಯಂತ್ರಣ ಅಭಿವೃದ್ಧಿ ಸಂಘ ಮತ್ತು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಕೀಟಶಾಸ್ತ್ರದ ದಂತಕಥೆ ಪ್ರೊ. ಟಿ. ಎನ್. ಅನಂತಕೃಷ್ಣನ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಎರಡು ದಿನಗಳ ಕೃಷಿ, ಆರೋಗ್ಯ ಮತ್ತು ಪರಿಸರದಲ್ಲಿ ಕೀಟಗಳ ಕುರಿತು ರಾಷ್ಟ್ರೀಯ ಸಂವಾದ ಕಾರ್ಯಕ್ರಮವನ್ನು ಡಿಸೆಂಬರ್ 15 ರಂದು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ. ಟಿ. ಎನ್. ಅನಂತಕೃಷ್ಣನ್ ಅವರಿಗೆ ಗೌರವ ನಮನ ಸಲ್ಲಿಸಲಾಯಿತು. ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲಗಳ ಬ್ಯೂರೋದ ನಿರ್ದೇಶಕರಾದ ಡಾ.ಎಸ್.ಎನ್. ಸುಶೀಲ್ ಅವರು ಕೀಟಶಾಸ್ತ್ರ ಕ್ಷೇತ್ರದಲ್ಲಿ ಪ್ರೊ.ಟಿ.ಎನ್. ಅನಂತಕೃಷ್ಣನ್ ಅವರ ಮಹತ್ವದ ಕೊಡುಗೆ ಹಾಗೂ ಕೀಟ ವಿಜ್ಞಾನದಲ್ಲಿ ಬ್ಯೂರೋ ಕೈಗೊಂಡ ಇತರ ಚಟುವಟಿಕೆಗಳ ಕುರಿತು ವಿವರಿಸಿದರು.
ಮುಖ್ಯ ಅತಿಥಿಗಳಾದ ಡಾ.ಎಸ್.ಎನ್.ಪುರಿ ಅವರು ಪ್ರೊ.ಟಿ.ಎನ್.ಅನಂತಕೃಷ್ಣನ್ ಅವರು ಥ್ರಿಪ್ಸ್ ನುಸಿ ಕುರಿತು ಕೈಗೊಂಡ ಸಂಶೋಧನೆಗಳನ್ನು ವಿವರಿಸಿದರು. ನೈಸರ್ಗಿಕ ಕೃಷಿಯಲ್ಲಿ ಬಳಸುವ ತಂತ್ರಜ್ಞಾನಗಳ ಸಂಶೋಧನೆ ಮತ್ತು ವಿವಿಧ ಜೈವಿಕ ನಿಯಂತ್ರಣ ವಿಧಾನಗಳನ್ನು ತಲುಪಿಸಲು ಡ್ರೋನ್ ಬಳಕೆಯ ಮಹತ್ವವನ್ನು ಅವರು ತಿಳಿಸಿದರು.
ಸಸ್ಯ ಸಂರಕ್ಷಣಾ ಸಲಹೆಗಾರರಾದ ಡಾ. ಜೆ. ಪಿ ಸಿಂಗ್ ಮಾತನಾಡಿ, ರಾಷ್ಟ್ರೀಯ ಕೀಟ ಕಣ್ಗಾವಲು ಯೋಜನೆ ಮತ್ತು ರೈತರು ಕೀಟನಾಶಕಗಳ ಸರಿಯಾದ ಪ್ರಮಾಣದ ಬಳಕೆಯನ್ನು ನಿರ್ಧರಿಸಲು ಕೀಟ ಶೋಧನೆಯ ಮಹತ್ವದ ಬಗ್ಗೆ ವಿವರಿಸಿದರು. ಜೋರ್ಹಟ್ ನ ಟೋಕ್ಲೈ ಟೀ ಸಂಶೋಧನಾ ಸಂಸ್ಥೆಯ ಮಾಜಿ ಮಹಾನಿರ್ದೇಶಕರಾದ ಡಾ. ಎನ್. ಮುರಳೀಧರನ್ ಮಾತನಾಡಿ, ಪ್ರೊ. ಟಿ. ಎನ್. ಅನಂತಕೃಷ್ಣನ್ ಅವರೊಂದಿಗಿನ ಒಡನಾಟ ಮತ್ತು ಅವರ ಮಾರ್ಗದರ್ಶನದಲ್ಲಿ ಕೈಗೊಂಡ ಸಂಶೋಧನೆಗಳ ಬಗ್ಗೆ ವಿವರಿಸಿದರು. ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ರೀ ಪಿ. ಶಿವಕುಮಾರ್ ಅವರು ಪರಿಸರ ವಿಜ್ಞಾನದಲ್ಲಿ ಕೀಟಗಳ ಮಹತ್ವದ ಬಗ್ಗೆ ವಿವರಿಸಿದರು. ಕಾರ್ಯಕ್ರಮದಲ್ಲಿ ನವದೆಹಲಿಯ ಭಾರತೀಯ ಕೀಟಶಾಸ್ತ್ರ ಸಂಘದಿಂದ ಪ್ರಕಟಿಸಲಾದ, ಪ್ರೊ. ಟಿ. ಎನ್. ಅನಂತಕೃಷ್ಣನ್ ಅವರ ವಿಶೇಷ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಕೃಷಿಯಲ್ಲಿನ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸುವ ಮಳಿಗೆಗಳನ್ನು ಏರ್ಪಡಿಸಲಾಗಿತ್ತು.
Matribhumi Samachar Kannad

