ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಹಡಗುಗಳು ಮತ್ತು ಬಂದರು ಸೌಲಭ್ಯಗಳ ಭದ್ರತೆಗಾಗಿ ಮೀಸಲಾದ ಬಂದರು ಭದ್ರತಾ ಬ್ಯೂರೋ (ಬಿಒಪಿಎಸ್) ರಚನೆಗಾಗಿ ಸಭೆ ನಡೆಸಿದರು. ಈ ಸಭೆಯಲ್ಲಿ ಕೇಂದ್ರ ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವರು ಮತ್ತು ನಾಗರಿಕ ವಿಮಾನಯಾನ ಸಚಿವರು ಭಾಗವಹಿಸಿದ್ದರು.

ಸಭೆಯಲ್ಲಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ದೇಶಾದ್ಯಂತ ಬಲಿಷ್ಠ ಬಂದರು ಭದ್ರತಾ ಚೌಕಟ್ಟನ್ನು ಸ್ಥಾಪಿಸುವ ಅಗತ್ಯವನ್ನು ಒತ್ತಿ ಹೇಳಿದರು. ದುರ್ಬಲತೆಗಳು, ವ್ಯಾಪಾರ ಸಾಮರ್ಥ್ಯ, ಸ್ಥಳ ಮತ್ತು ಇತರ ಸಂಬಂಧಿತ ನಿಯತಾಂಕಗಳನ್ನು ಗಣನೆಗೆ ತೆಗೆದುಕೊಂಡು ಭದ್ರತಾ ಕ್ರಮಗಳನ್ನು ಶ್ರೇಣೀಕೃತ ಮತ್ತು ಅಪಾಯ ಆಧಾರಿತ ರೀತಿಯಲ್ಲಿ ಕಾರ್ಯಗತಗೊಳಿಸಬೇಕು ಎಂದು ಶ್ರೀ ಶಾ ನಿರ್ದೇಶನ ನೀಡಿದರು.

ಹೊಸದಾಗಿ ಘೋಷಿಸಲಾದ ಮರ್ಚೆಂಟ್ ಶಿಪ್ಪಿಂಗ್ ಕಾಯ್ದೆ, 2025ರ ಸೆಕ್ಷನ್ 13ರ ನಿಬಂಧನೆಗಳ ಅಡಿಯಲ್ಲಿ ಬಂದರು ಭದ್ರತಾ ಬ್ಯೂರೋ (ಬಿಒಪಿಎಸ್) ಅನ್ನು ಶಾಸನಬದ್ಧ ಸಂಸ್ಥೆಯಾಗಿ ರಚಿಸಲಾಗುವುದು. ಮಹಾನಿರ್ದೇಶಕರ ನೇತೃತ್ವದ ಬ್ಯೂರೋ, ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಹಡಗುಗಳು ಮತ್ತು ಬಂದರು ಸೌಲಭ್ಯಗಳ ಭದ್ರತೆಗೆ ಸಂಬಂಧಿಸಿದ ನಿಯಂತ್ರಕ ಮತ್ತು ಮೇಲ್ವಿಚಾರಣಾ ಕಾರ್ಯಗಳಿಗೆ ಜವಾಬ್ದಾರರಾಗಿರುತ್ತದೆ. ಈ ಬ್ಯೂರೋವನ್ನು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ (ಬಿಸಿಎಎಸ್) ಮಾದರಿಯಲ್ಲಿ ರೂಪಿಸಲಾಗುತ್ತಿದೆ. ಬಿಒಪಿಎಸ್ ನೇತೃತ್ವವನ್ನು ಐಪಿಎಸ್ ಅಧಿಕಾರಿ (ವೇತನ ಮಟ್ಟ -15) ವಹಿಸುತ್ತಾರೆ. ಒಂದು ವರ್ಷದ ಪರಿವರ್ತನೆಯ ಅವಧಿಯಲ್ಲಿ, ಶಿಪ್ಪಿಂಗ್ ಮಹಾನಿರ್ದೇಶಕರು (ಡಿಜಿಎಸ್/ಡಿಜಿಎಂಎ) ಬಿಒಪಿಎಸ್ ನ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಾರೆ.

ಡಿಜಿಟಲ್ ಬೆದರಿಕೆಗಳಿಂದ ಬಂದರು ಐಟಿ ಮೂಲಸೌಕರ್ಯವನ್ನು ರಕ್ಷಿಸಲು ಮೀಸಲಾದ ವಿಭಾಗ ಸೇರಿದಂತೆ ಸೈಬರ್ ಭದ್ರತೆಯ ಮೇಲೆ ವಿಶೇಷ ಗಮನಹರಿಸಿ, ಭದ್ರತೆಗೆ ಸಂಬಂಧಿಸಿದ ಮಾಹಿತಿಯ ಸಕಾಲಿಕ ವಿಶ್ಲೇಷಣೆ, ಸಂಗ್ರಹಣೆ ಮತ್ತು ವಿನಿಮಯವನ್ನು ಬಿಒಪಿಎಸ್ ಖಚಿತಪಡಿಸುತ್ತದೆ. ಬಂದರು ಭದ್ರತಾ ಮೂಲಸೌಕರ್ಯವನ್ನು ಬಲಪಡಿಸುವ ಸಲುವಾಗಿ, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿ ಐ ಎಸ್ ಎಫ್) ಅನ್ನು ಬಂದರು ಸೌಲಭ್ಯಗಳಿಗಾಗಿ ಮಾನ್ಯತೆ ಪಡೆದ ಭದ್ರತಾ ಸಂಸ್ಥೆ (ಆರ್ ಎಸ್ ಒ) ಎಂದು ಗೊತ್ತುಪಡಿಸಲಾಗಿದೆ ಮತ್ತು ಬಂದರುಗಳಿಗೆ ಭದ್ರತಾ ಮೌಲ್ಯಮಾಪನಗಳನ್ನು ಕೈಗೊಳ್ಳುವ ಮತ್ತು ಭದ್ರತಾ ಯೋಜನೆಗಳನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ಹೊಂದಿದೆ.
ಬಂದರು ಭದ್ರತೆಯಲ್ಲಿ ತೊಡಗಿರುವ ಖಾಸಗಿ ಭದ್ರತಾ ಸಂಸ್ಥೆಗಳ (ಪಿ ಎಸ್ ಎ) ಸಾಮರ್ಥ್ಯಗಳನ್ನು ತರಬೇತಿ ಮತ್ತು ನಿರ್ಮಿಸುವುದು ಸಿ ಐ ಎಸ್ ಎಫ್ ನ ಕರ್ತವ್ಯವಾಗಿದೆ. ಈ ಏಜೆನ್ಸಿಗಳನ್ನು ಪ್ರಮಾಣೀಕರಿಸಬೇಕು ಮತ್ತು ಪರವಾನಗಿ ಪಡೆದ ಪಿ ಎಸ್ ಎ ಗಳು ಮಾತ್ರ ಈ ವಲಯದಲ್ಲಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಸೂಕ್ತ ನಿಯಂತ್ರಕ ಕ್ರಮಗಳನ್ನು ಪರಿಚಯಿಸಬೇಕು. ಸಭೆಯಲ್ಲಿ, ಕಡಲ ಭದ್ರತಾ ಚೌಕಟ್ಟಿನಿಂದ ಕಲಿತ ಪಾಠಗಳನ್ನು ವಾಯುಯಾನ ಭದ್ರತಾ ಕ್ಷೇತ್ರದಲ್ಲಿ ಪುನರಾವರ್ತಿಸಬೇಕು ಎಂದು ತಿಳಿಸಲಾಯಿತು.
Matribhumi Samachar Kannad

