ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 25, 2025 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀ ರಾಮ ಜನ್ಮಭೂಮಿ ಮಂದಿರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಹಾಗೂ, ಈ ಮೂಲಕ ದೇಶದ ಸಾಮಾಜಿಕ-ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಭೂಚೌಕಟ್ಟಿನ ಅತ್ಯಂತ ಮಹತ್ವಪೂರ್ಣ ಸಂದರ್ಭವನ್ನು ಕೂಡಾ ಗುರುತಿಸಲಿದ್ದಾರೆ.
ನವೆಂಬರ್ 25, 2025 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ, ಪ್ರಧಾನಮಂತ್ರಿ ಅವರು ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ಮಹರ್ಷಿ ವಾಲ್ಮೀಕಿ, ದೇವಿ ಅಹಲ್ಯ, ನಿಷಾದರಾಜ್ ಗುಹಾ ಮತ್ತು ಮಾತಾ ಶಬರಿ ಅವರಿಗೆ ಸಂಬಂಧಿಸಿದ ದೇವಾಲಯಗಳನ್ನು ಹೊಂದಿರುವ ಸಪ್ತಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಇದಾದ ನಂತರ ಶೇಷಾವತರ್ ಮಂದಿರಕ್ಕೆ ಕೂಡಾ ಭೇಟಿ ನೀಡಲಿದ್ದಾರೆ.
ಹಾಗೂ ಬೆಳಗ್ಗೆ 11 ಗಂಟೆ ಸುಮಾರಿಗೆ, ಪ್ರಧಾನಮಂತ್ರಿ ಅವರು ಮಾತಾ ಅನ್ನಪೂರ್ಣ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಇದಾದ ನಂತರ, ಅವರು ರಾಮ ದರ್ಬಾರ್ ಗರ್ಭಗೃಹದಲ್ಲಿ ದರ್ಶನ ಪಡೆಯಲಿದ್ದಾರೆ ಮತ್ತು ಪೂಜೆಯನ್ನು ನೆರವೇರಿಸಲಿದ್ದಾರೆ, ನಂತರ ರಾಮ ಲಲ್ಲಾ ಗರ್ಭಗುಡಿಯಲ್ಲಿ ದೇವರ ದರ್ಶನ ಪಡೆಯಲಿದ್ದಾರೆ.
ಅಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ, ಪ್ರಧಾನಮಂತ್ರಿ ಅವರು ಅಯೋಧ್ಯೆಯ ಪವಿತ್ರ ಶ್ರೀ ರಾಮ ಜನ್ಮಭೂಮಿ ದೇವಾಲಯದ ಗೋಪುರದ ಶಿಖರದ ಮೇಲೆ ಕೇಸರಿ ಧ್ವಜವನ್ನು ವಿಧ್ಯುಕ್ತವಾಗಿ ಹಾರಿಸಲಿದ್ದಾರೆ, ಇದು ದೇವಾಲಯದ ನಿರ್ಮಾಣ ಪೂರ್ಣಗೊಂಡಿರುವುದನ್ನು ಸಂಕೇತಿಸುತ್ತದೆ ಮತ್ತು ಸಾಂಸ್ಕೃತಿಕ ಆಚರಣೆ ಮತ್ತು ರಾಷ್ಟ್ರೀಯ ಏಕತೆಯ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ನೆರೆದಿರುವ ಸಭಿಕರ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮವು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಶುಭ ಪಂಚಮಿಯಂದು ನಡೆಯಲಿದ್ದು, ಶ್ರೀ ರಾಮ ಮತ್ತು ಸೀತಾ ಮಾತೆಯ ವಿವಾಹ ಪಂಚಮಿಯ ಅಭಿಜಿತ್ ಮುಹೂರ್ತದೊಂದಿಗೆ ಇದು ದೈವಿಕ ಒಕ್ಕೂಟವನ್ನು ಸಂಕೇತಿಸುತ್ತದೆ. ಈ ದಿನಾಂಕವು 17 ನೇ ಶತಮಾನದಲ್ಲಿ ನಿರಂತರವಾಗಿ 48 ಗಂಟೆಗಳ ಕಾಲ ಅಯೋಧ್ಯೆಯಲ್ಲಿ ಧ್ಯಾನ ಮಾಡಿದ್ದ ಒಂಬತ್ತನೇ ಸಿಖ್ ಗುರು “ಗುರು ತೇಜ್ ಬಹದ್ದೂರ್ ಜಿ” ಅವರ ಹುತಾತ್ಮ ದಿನವನ್ನು ಸಹ ಸೂಚಿಸುತ್ತದೆ, ಇದು ದಿನದ ಆಧ್ಯಾತ್ಮಿಕ ಮಹತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಹತ್ತು ಅಡಿ ಎತ್ತರ ಮತ್ತು ಇಪ್ಪತ್ತು ಅಡಿ ಉದ್ದದ ಬಲಕೋನ ಹೊಂದಿರುವ ತ್ರಿಕೋನ ಆಕಾರದ ಧ್ವಜವು ಭಗವಾನ್ ಶ್ರೀ ರಾಮನ ತೇಜಸ್ಸು ಮತ್ತು ಶೌರ್ಯವನ್ನು ಸಂಕೇತಿಸುವ ವಿಕಿರಣ ಸೂರ್ಯನ ಚಿತ್ರವನ್ನು ಹೊಂದಿದೆ, ಅದರ ಮೇಲೆ ‘ಓಂ’ ಅನ್ನು ಕೆತ್ತಲಾಗಿದೆ ಮತ್ತು ಕೋವಿದರ ಮರದ ಚಿತ್ರವಿದೆ. ಪವಿತ್ರ ಕೇಸರಿ ಧ್ವಜವು ರಾಮ ರಾಜ್ಯದ ಆದರ್ಶಗಳನ್ನು ಸಾಕಾರಗೊಳಿಸುವ ಘನತೆ, ಏಕತೆ ಮತ್ತು ಸಾಂಸ್ಕೃತಿಕ ನಿರಂತರತೆಯ ಸಂದೇಶವನ್ನು ಕೂಡಾ ನೀಡುತ್ತದೆ.
ಸಾಂಪ್ರದಾಯಿಕ ಉತ್ತರ ಭಾರತದ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಗೋಪುರದ ಶಿಖರದ ಮೇಲೆ ಕೇಸರಿ ಧ್ವಜವು ಏರಲಿದೆ. ದಕ್ಷಿಣ ಭಾರತದ ವಾಸ್ತುಶಿಲ್ಪ ಸಂಪ್ರದಾಯದಲ್ಲಿ ವಿನ್ಯಾಸಗೊಳಿಸಲಾದ ದೇವಾಲಯದ ಸುತ್ತಲೂ ನಿರ್ಮಿಸಲಾದ ಸುತ್ತುವರಿದ ಆವರಣವಾದ 800 ಮೀಟರ್ ವಿಸ್ತೀರ್ಣದ ಸಂಕೀರ್ಣವು ಸಂಪೂರ್ಣವಾಗಿ ಪಾರ್ಕೋಟಾ ದೇವಾಲಯದ ವಾಸ್ತುಶಿಲ್ಪ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ.
ದೇವಾಲಯ ಸಂಕೀರ್ಣವು ಮುಖ್ಯ ದೇವಾಲಯದ ಹೊರ ಗೋಡೆಗಳ ಮೇಲೆ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ ಭಗವಾನ್ ಶ್ರೀ ರಾಮನ ಜೀವನದಿಂದ 87 ಸಂಕೀರ್ಣವಾಗಿ ಕೆತ್ತಿದ ಕಲ್ಲಿನ ಪ್ರಸಂಗಗಳನ್ನು ಮತ್ತು ಆವರಣ ಗೋಡೆಗಳ ಉದ್ದಕ್ಕೂ ಇರಿಸಲಾದ ಭಾರತೀಯ ಸಂಸ್ಕೃತಿಯ 79 ಕಂಚಿನ-ಎರಕಹೊಯ್ದ ಪ್ರಸಂಗಗಳನ್ನು ಒಳಗೊಂಡಿದೆ. ಈ ಅಂಶಗಳು ಒಟ್ಟಾಗಿ, ಎಲ್ಲಾ ಸಂದರ್ಶಕರಿಗೆ ಅರ್ಥಪೂರ್ಣ, ವೈವಿದ್ಯಮಯ ಮತ್ತು ಶೈಕ್ಷಣಿಕ ಅನುಭವವನ್ನು ನೀಡುತ್ತವೆ, ಹಾಗೂ ಭಗವಾನ್ ಶ್ರೀ ರಾಮನ ಜೀವನ ಮತ್ತು ಭಾರತದ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಆಳವಾದ ಒಳನೋಟವನ್ನು ಕೂಡಾ ನೀಡುತ್ತವೆ.
Matribhumi Samachar Kannad

