Monday, January 19 2026 | 01:15:10 PM
Breaking News

15ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪಾಲ್ಗೊಂಡ ರಾಷ್ಟ್ರಪತಿ

Connect us on:

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಜನವರಿ 25, 2025) ಹೊಸದಿಲ್ಲಿಯಲ್ಲಿ ನಡೆದ 15 ನೇ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಪಾಲ್ಗೊಂಡು ಭಾಷಣ ಮಾಡಿದರು. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಚುನಾವಣೆಗಳನ್ನು ಸುಗಮವಾಗಿ ನಡೆಸುವಲ್ಲಿ ಅನುಕರಣೀಯ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ರಾಜ್ಯ ಮತ್ತು ಜಿಲ್ಲಾ ಅಧಿಕಾರಿಗಳಿಗೆ ಅತ್ಯುತ್ತಮ ಚುನಾವಣಾ ಅಭ್ಯಾಸ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರಿಂದ “ಇಂಡಿಯಾ ವೋಟ್ಸ್ 2024: ಎ ಸಾಗಾ ಆಫ್ ಡೆಮಾಕ್ರಸಿ” ಪುಸ್ತಕದ ಮೊದಲ ಪ್ರತಿಯನ್ನು ಅವರು ಸ್ವೀಕರಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ನಮ್ಮ ಪ್ರಜಾಪ್ರಭುತ್ವವು ವಿಶ್ವದ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಮಾತ್ರವಲ್ಲ, ವಿಶ್ವದ ಅತಿದೊಡ್ಡ, ವೈವಿಧ್ಯಮಯ, ಯುವ, ಅಂತರ್ಗತ ಮತ್ತು ಸೂಕ್ಷ್ಮ ಪ್ರಜಾಪ್ರಭುತ್ವವಾಗಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು. ಭಾರತದ ಪ್ರಜಾಪ್ರಭುತ್ವವು ಆಧುನಿಕ ಜಗತ್ತಿಗೆ ವಿಶಿಷ್ಟ ಉದಾಹರಣೆಯಾಗಿದೆ. ವಿಶ್ವದ ಅನೇಕ ದೇಶಗಳು ನಮ್ಮ ಚುನಾವಣಾ ವ್ಯವಸ್ಥೆ ಮತ್ತು ನಿರ್ವಹಣೆಯಿಂದ   ಕಲಿಯುತ್ತಿವೆ ಎಂದು ಅವರು ಹೇಳಿದರು.

ನಮ್ಮ ಅಂತರ್ಗತ ಪ್ರಜಾಪ್ರಭುತ್ವದ ಪ್ರಭಾವಶಾಲಿ ನೋಟವು ಚುನಾವಣೆಗಳಲ್ಲಿ ಗೋಚರಿಸುತ್ತದೆ ಎಂದು ರಾಷ್ಟ್ರಪತಿ ಹೇಳಿದರು. ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಮಹಿಳೆಯರ ಭಾಗವಹಿಸುವಿಕೆಯು ನಮ್ಮ ಸಮಾಜ ಮತ್ತು ದೇಶದ ಒಟ್ಟಾರೆ ಅಭಿವೃದ್ಧಿಯ ಪ್ರಮುಖ ಸಂಕೇತವಾಗಿದೆ. 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ಮತದಾರರು, ವಿಕಲಚೇತನ ಮತದಾರರು ಮತ್ತು ದೂರದ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಮತದಾರರಿಗೆ ಮತದಾನ ಪ್ರಕ್ರಿಯೆಯನ್ನು ಸುಗಮಗೊಳಿಸಲು ಚುನಾವಣಾ ಆಯೋಗ ವಿಶೇಷ ಪ್ರಯತ್ನಗಳನ್ನು ಮಾಡಿದೆ ಎಂಬುದರತ್ತ  ಅವರು ಗಮನ ಸೆಳೆದರು. ಈ ರೀತಿಯಾಗಿ, ಚುನಾವಣಾ ಆಯೋಗವು ಅಂತರ್ಗತ ಮತ್ತು ಸೂಕ್ಷ್ಮ ಚುನಾವಣಾ ನಿರ್ವಹಣೆಗೆ ಉತ್ತಮ ಉದಾಹರಣೆಯನ್ನು ನೀಡಿದೆ ಎಂದೂ ಅವರು ಹೇಳಿದರು.

ಮತದಾನಕ್ಕೆ ಸಂಬಂಧಿಸಿದ ಆದರ್ಶಗಳು ಮತ್ತು ಜವಾಬ್ದಾರಿಗಳು ನಮ್ಮ ಪ್ರಜಾಪ್ರಭುತ್ವದ ಪ್ರಮುಖ ಆಯಾಮಗಳಾಗಿವೆ ಎಂದು ರಾಷ್ಟ್ರಪತಿ ಹೇಳಿದರು. ಚುನಾವಣಾ ಆಯೋಗ ಹೊರಡಿಸಿದ ಮತದಾರರ ಪ್ರತಿಜ್ಞೆ ಎಲ್ಲಾ ನಾಗರಿಕರಿಗೆ ಮಾರ್ಗದರ್ಶನ ನೀಡುತ್ತದೆ. ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ನಂಬಿಕೆಯ ಜೊತೆಗೆ, ಮತದಾರರು ಎಲ್ಲಾ ರೀತಿಯ ಸಂಕುಚಿತ ಮನೋಭಾವ, ತಾರತಮ್ಯ ಮತ್ತು ಪ್ರಲೋಭನೆಗಳನ್ನು ಮೀರಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ದೃಢ ಸಂಕಲ್ಪವನ್ನು ಹೊಂದಿರಬೇಕು ಎಂದು ಅವರು ಹೇಳಿದರು. ಪ್ರಬುದ್ಧ ಮತದಾರರು ನಮ್ಮ ಪ್ರಜಾಪ್ರಭುತ್ವವನ್ನು ಬಲಪಡಿಸುತ್ತಾರೆ ಎಂದು ಅವರು ನುಡಿದರು.

2011 ರಿಂದ, ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ನೆನಪಿಗಾಗಿ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಈ ಕಾರ್ಯಕ್ರಮವು ಮತದಾರರ ಕೇಂದ್ರೀಕರಣವನ್ನು ಒತ್ತಿಹೇಳುವುದು, ನಾಗರಿಕರಲ್ಲಿ ಚುನಾವಣಾ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.

About Matribhumi Samachar

Check Also

ಭಾರತದ ರಾಷ್ಟ್ರಪತಿ ಒಡಿಶಾದ ರಾಯರಂಗಪುರದಲ್ಲಿ # ಸ್ಕಿಲ್ ದ ನೇಶನ್ ಎ.ಐ. ಸವಾಲಿಗೆ ಚಾಲನೆ ನೀಡಿದರು ಮತ್ತು ಇಗ್ನೋ ಪ್ರಾದೇಶಿಕ ಕೇಂದ್ರ ಹಾಗು ಕೌಶಲ್ಯ ಕೇಂದ್ರವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು

ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಇಂದು (ಜನವರಿ 1, 2026) ನಡೆದ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು …