ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು 29 ಡಿಸೆಂಬರ್ 2025ರಂದು ಹುಬ್ಬಳ್ಳಿಯ ಕೇಶವಪುರದಲ್ಲಿ ಹೊಸ ಯುಐಡಿಎಐ ಆಧಾರ್ ಸೇವಾ ಕೇಂದ್ರವನ್ನು ಉದ್ಘಾಟಿಸಿದೆ. ಇದು ನಗರದಲ್ಲಿ ನಾಗರಿಕ ಕೇಂದ್ರಿತ ಆಧಾರ್ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ಈ ಆಧಾರ್ ಸೇವಾ ಕೇಂದ್ರವನ್ನು ಧಾರವಾಡ ಜಿಲ್ಲಾಧಿಕಾರಿಗಳಾದ ಶ್ರೀಮತಿ ದಿವ್ಯ ಪ್ರಭು ಜಿ.ಆರ್.ಜೆ ಅವರು ಉದ್ಘಾಟಿಸಿದರು. ಈ ಕಾರ್ಯಕ್ರಮವನ್ನು ಯುಐಡಿಎಐ ಪ್ರಾದೇಶಿಕ ಕಚೇರಿ ಬೆಂಗಳೂರು ಆಯೋಜಿಸಿತ್ತು ಮತ್ತು ಯುಐಡಿಎಐ ನಿರ್ದೇಶಕರಾದ (ಕರ್ನಾಟಕ) ಶ್ರೀ ಮನೋಜ್ ಕುಮಾರ್ ಹಾಗೂ ಯುಐಡಿಎಐನ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಹುಬ್ಬಳ್ಳಿಯಲ್ಲಿ ಆಧಾರ್ ಸೇವಾ ಕೇಂದ್ರದ ಪ್ರಾರಂಭದ ಕುರಿತು ಮಾತನಾಡಿದ ಧಾರವಾಡ ಜಿಲ್ಲಾಧಿಕಾರಿಗಳು, ಹುಬ್ಬಳ್ಳಿ ನಗರದ ಕೇಶವಪುರದಲ್ಲಿ ಯುಐಡಿಎಐ ವತಿಯಿಂದ ಇಂದು ಹೊಸ ಆಧಾರ್ ಸೇವಾ ಕೇಂದ್ರವನ್ನು ತೆರೆಯಲಾಗಿದೆ. ಯುಐಡಿಎಐನ ಹೊಸ ಗುತ್ತಿಗೆ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಈ ಹೊಸ ಕೇಂದ್ರವನ್ನು ತೆರೆಯಲಾಗಿದೆ. ಈ ಹಿಂದೆ ಹುಬ್ಬಳ್ಳಿ ಕೇಂದ್ರವು 2019 ರಿಂದ 2025 ರವರೆಗೆ ಕಾರ್ಯನಿರ್ವಹಿಸುತ್ತಿತ್ತು ಮತ್ತು ಈಗ ಪುನಃ ಸೇವೆಗಳನ್ನು ಪುನರಾರಂಭಿಸಿದೆ ಎಂದು ತಿಳಿಸಿದರು. ಆಧಾರ್ ಸೇವಾ ಕೇಂದ್ರವು ಹೊಸ ನೋಂದಣಿ, ವಿಳಾಸ ತಿದ್ದುಪಡಿ, ಹೆಸರು ಬದಲಾವಣೆ ಮತ್ತು ಇತರ ನವೀಕರಣಗಳು ಸೇರಿದಂತೆ ಆಧಾರ್ಗೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುತ್ತದೆ. ಇದು ಯುಐಡಿಎಐ ನಿರ್ವಹಿಸುವ ಸಮಗ್ರ ಸೇವಾ ಕೇಂದ್ರವಾಗಿದೆ. ರಾಜ್ಯಾದ್ಯಂತ ಈ ಹಿಂದೆ ಅಂತಹ ಸೌಲಭ್ಯಗಳು ಲಭ್ಯವಿಲ್ಲದ ಜಿಲ್ಲೆಗಳಲ್ಲಿ ಆಧಾರ್ ಸೇವಾ ಕೇಂದ್ರಗಳನ್ನು ಪುನರಾರಂಭಿಸಲಾಗುತ್ತಿದೆ ಎಂದು ಹೇಳಿದರು.

ಹುಬ್ಬಳ್ಳಿ ಕೇಂದ್ರವು ಈಗ ಕಾರ್ಯನಿರ್ವಹಿಸುತ್ತಿದ್ದರೂ, ಧಾರವಾಡ ನಗರದಲ್ಲಿಯೂ ಆಧಾರ್ ಸೇವಾ ಕೇಂದ್ರವನ್ನು ಪುನರಾರಂಭಿಸಬೇಕೆಂಬ ಬಲವಾದ ಸಾರ್ವಜನಿಕ ಬೇಡಿಕೆಯಿದೆ ಮತ್ತು ಈ ಅಗತ್ಯತೆಯು ಪರಿಶೀಲನೆಯಲ್ಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸೇವಾ ವ್ಯವಸ್ಥೆಯನ್ನು ವಿವರಿಸುತ್ತಾ ಅವರು, ಕೇಂದ್ರವು ವ್ಯವಸ್ಥಿತ ಮತ್ತು ಪಾರದರ್ಶಕ ಪ್ರಕ್ರಿಯೆಯನ್ನು ಅನುಸರಿಸುತ್ತದೆ. ಟೋಕನ್ ಆಧಾರಿತ ಪ್ರವೇಶವನ್ನು ಪರಿಚಯಿಸಲಾಗಿದೆ ಮತ್ತು ಪ್ರತಿ ಹಂತದಲ್ಲೂ ಪರಿಶೀಲನೆ ನಡೆಸಲಾಗುತ್ತದೆ. ಶುಲ್ಕ ಪಾವತಿಯವರೆಗಿನ ಪ್ರಕ್ರಿಯೆಯನ್ನು ನಿರ್ವಹಿಸಲು ತರಬೇತಿ ಪಡೆದ ಸಿಬ್ಬಂದಿ ಹೊಂದಿರುವ ನಾಲ್ಕು ಪ್ರತ್ಯೇಕ ಸೇವಾ ಕೌಂಟರ್ಗಳಿವೆ. ದಕ್ಷ ಸೇವಾ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಯುಐಡಿಎಐ ಈ ಕೇಂದ್ರಕ್ಕೆ ಮೀಸಲಾದ ಕಾರ್ಯಾಚರಣಾ ವ್ಯವಸ್ಥಾಪಕರನ್ನು ನೇಮಿಸುತ್ತಿದೆ ಎಂದು ಹೇಳಿದರು. ಅವರು ಸಾರ್ವಜನಿಕರಿಗೆ ಮನವಿ ಮಾಡುತ್ತ, “ನಾಗರಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಮತ್ತು ಹುಬ್ಬಳ್ಳಿಯಲ್ಲಿ ಸಮಯೋಚಿತ ಹಾಗೂ ಸುಧಾರಿತ ಆಧಾರ್ ಸೇವೆಗಳನ್ನು ಪಡೆಯಲು ಪ್ರೋತ್ಸಾಹಿಸಲಾಗುತ್ತದೆ ಎಂದರು.
ಆಧಾರ್ ಸೇವಾ ಕೇಂದ್ರವು ಯುಐಡಿಎಐನ ನೇರ ಮೇಲ್ವಿಚಾರಣೆಯಲ್ಲಿ ಸುರಕ್ಷಿತ, ಪ್ರಮಾಣಿತ ಮತ್ತು ಉತ್ತಮ ಗುಣಮಟ್ಟದ ಆಧಾರ್ ಸೇವೆಗಳನ್ನು ಒದಗಿಸಲು ಸ್ಥಾಪಿಸಲಾದ ಯುಐಡಿಎಐ ಚಾಲಿತ ಸೌಲಭ್ಯವಾಗಿದೆ. ಈ ಕೇಂದ್ರವು ನಿವಾಸಿಗಳಿಗೆ ಆಧಾರ್ ನೋಂದಣಿ, ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ನವೀಕರಣಗಳು, ದೋಷ ತಿದ್ದುಪಡಿಗಳು ಮತ್ತು ಕುಂದುಕೊರತೆ ನಿವಾರಣೆಗಳನ್ನು ಒಂದೇ ಸೂರಿನಡಿ ಒದಗಿಸುವ ಮೂಲಕ ನಾಗರಿಕರ ಅನುಭವವನ್ನು ಸುಗಮಗೊಳಿಸುತ್ತದೆ. ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ, ವಾರದ ಎಲ್ಲಾ ಏಳು ದಿನಗಳೂ ಈ ಆಧಾರ್ ಸೇವಾ ಕೇಂದ್ರವು ಕಾರ್ಯನಿರ್ವಹಿಸುತ್ತದೆ, ಇದರಿಂದಾಗಿ ಸಾರ್ವಜನಿಕರು ವಾರದ ಯಾವುದೇ ದಿನದಂದು ಸೇವೆಗಳನ್ನು ಪಡೆಯಬಹುದಾಗಿದೆ.
ಡಿಜಿಟಲ್ ಒಳಗೊಳ್ಳುವಿಕೆ ಮತ್ತು ಉತ್ತಮ ಆಡಳಿತದ ಭಾರತ ಸರ್ಕಾರದ ದೂರದೃಷ್ಟಿಗೆ ಅನುಗುಣವಾಗಿ, ಸುಲಭವಾಗಿ ಲಭ್ಯವಿರುವ ಹಾಗೂ ದಕ್ಷ ನಾಗರಿಕ ಕೇಂದ್ರಿತ ಆಧಾರ್ ಸೇವೆಗಳನ್ನು ಒದಗಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸಲು ಯುಐಡಿಎಐ ಸೆಪ್ಟೆಂಬರ್ 2026ರ ವೇಳೆಗೆ ಕರ್ನಾಟಕದಲ್ಲಿ ಇನ್ನೂ 22 ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಲಿದೆ.
Matribhumi Samachar Kannad

